ಭಟ್ಕಳ: ರಾಜ್ಯದಾದ್ಯಂತ ಪಹಣಿ ಖಾತೆಯೊಂದಿಗೆ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಸರಕಾರದ ಅಧಿಸೂಚನೆಯಂತೆ ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಆಧಾರ್ ಜೋಡಣೆಗೆ ಆಗಸ್ಟ್ 15 ಕೊನೆಯ ದಿನಾಂಕ ವನ್ನಾಗಿ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ನಾಗರಾಜ ನಾಯ್ಕಡ್ ಹೇಳಿದ್ದಾರೆ.
ಗ್ರಾಮೀಣ ಹಾಗೂ ಇತರೆ ಭಾಗಗಳಲ್ಲಿ ತಂತ್ರಾಂಶದ ಅಡಚಣೆಯಿಂದಾಗಿ ಪಹಣಿಗೆ ಆಧಾರ ಸಂಖ್ಯೆಯನ್ನು ಜೋಡಿಸುವಲ್ಲಿ ವಿಳಂಬವಾಗುತ್ತಿದ್ದು ಇದನ್ನು ಮನಗಂಡ ತಹಸಿಲ್ದಾರ್ ಕೊನೆಯ ದಿನಾಂಕವನ್ನು ಆಗಸ್ಟ್ 15ನೇ ತಾರೀಖಿನವರೆಗೆ ವಿಸ್ತರಿಸಿದ್ದಾರೆ. ಪಹಣಿ ಅಥವಾ ಆರ್ ಟಿ ಸಿ ಗೆ ಆಧಾರ ಜೋಡಣೆಯಿಂದ ಅಕ್ರಮ ಪಹಣಿ ನೋಂದಣಿಯನ್ನು ತಪ್ಪಿಸಬಹುದು. ಅಲ್ಲದೆ ಸರ್ಕಾರದಿಂದ ಕೃಷಿಗೆ ಸಂಬಂಧಪಟ್ಟ ಸವಲತ್ತುಗಳನ್ನು ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ತಹಶೀಲ್ದಾರ್ ನಾಗರಾಜ ನಾಯ್ಕಡ್ ಅವರು ಹೇಳಿದ್ದಾರೆ.
ತಾಲೂಕಿನ ಎಲ್ಲಾ ಪಹಣಿದಾರರು ತಕ್ಷಣ ತಮ್ಮ ತಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಆಧಾರ್ ಗೆ ನೋಂದಾಯಿಸಲ್ಪಟ್ಟ ಮೊಬೈಲ್ ಹಾಗೂ ಆರ್ ಟಿ ಸಿ ಯನ್ನು ಅಥವಾ ಪಹಣಿಯನ್ನು ತೋರಿಸಿ ತಕ್ಷಣ ತಂತ್ರಾಂಶದ ಸಹಾಯದಿಂದ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಪಹಣಿದಾರರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಪಹಣಿಗಳ ಪೋರ್ಝರಿ ನೋಂದಣಿಯನ್ನು ತಪ್ಪಿಸಬೇಕಾಗಿ ವಿನಂತಿಸಿದ್ದಾರೆ.