ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 400 ಸ್ಥಾನ ಗೆದ್ರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದ ಬಿಜೆಪಿ ಸಂಸದ

400 ಸ್ಥಾನ ಗೆದ್ರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದ ಬಿಜೆಪಿ ಸಂಸದ

Mon, 11 Mar 2024 00:28:23  Office Staff   SO News Service

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಕಾಂಗ್ರೆಸ್​ನವರು ಅನಗತ್ಯವಾಗಿ ಹೇರಿದ ವಿಚಾರಗಳನ್ನು ಸಂವಿಧಾನದಿಂದ ತೆಗೆದು ಹಾಕಲು ನಮಗೆ ಬಹುಮತದ ಅಗತ್ಯವಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ 2/3 ರಷ್ಟು ಇಲ್ಲ. ಹೀಗಾಗಿ ಈ ಸಲ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಬಹುಮತ ಅಗತ್ಯವಿದೆ ಎಂದರು.

ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನೇ ತಿರುಚಿದ್ದಾರೆ. ಸಂವಿಧಾನದಲ್ಲಿ ಬೇಡದೇ ಇರುವುದನ್ನೆಲ್ಲ ಸೇರಿಸಿದ್ದಾರೆ. ಇಡೀ ಹಿಂದೂ ಸಮಾಜವನ್ನು ದಮನಿಸುವ ರೀತಿ ಕಾನೂನು ತಂದಿದ್ದಾರೆ. ಇದೆಲ್ಲವೂ ಬದಲಾಗಬೇಕಿದ್ದರೆ ಬಹುಮತ ಇಲ್ಲದಿದ್ದರೆ ಆಗುವುದಿಲ್ಲ. ರಾಜ್ಯಸಭೆಯಲ್ಲೂ ನಮಗೆ ಬಹುಮತ ಬೇಕಾಗುತ್ತದೆ. ಎರಡೂ ಕಡೆ 2/3 ರಷ್ಟು ಬಹುಮತ ಬೇಕಾಗುತ್ತದೆ ಎಂದರು.

ಕಾಂಗ್ರೆಸ್‌ನವರು ಹೆಚ್ಚು ಇದ್ದರೆ ಏನೇ ತಿದ್ದುಪಡಿ ತಂದರೂ ಪಾಸ್ ಆಗಲ್ಲ. ಸಿಎಎ ಜಾರಿಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಸಿಎಎ ತರದಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಯಲ್ಲಿ ಇರಲ್ಲ. ಇದು ದೇಶದ್ರೋಹಿಗಳ ಆಡಂಬರ ಆಗುತ್ತದೆ. ಎಲ್ಲೆಡೆ ಬಹುಮತ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತಾ. ಜಾತ್ರೆಗೆ ಒಂದು ಕಳೆ ಬರೋದು ಇದಾದ ನಂತರವೇ ಎಂದರು.

ಹಿಂದಿನ ಬಾರಿ ಶೇಕಡಾ 68 ರಷ್ಟು ಮತ ಬಂದಿತ್ತು. ಒಟ್ಟು ಹಿಂದೂಗಳ ಶೇಕಡಾ 85ರಷ್ಟು ಮತ ಈ ಕ್ಷೇತ್ರದಲ್ಲಿ ಬಂದಿತ್ತು. ಒಂದು 15, 10 ಪರ್ಸೆಂಟ್ ಸೋಡಾಬಾಟ್ಲಿ ಇರುತ್ತವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾರೂ ಇಲ್ಲ ಅಂದರೆ ಕುಸ್ತಿ ಯಾರ್ ಹತ್ರ ಆಡೋದು? ನಮ್ಮ ದೇಶ ಸರಿ ಆಗಬೇಕು ಅಂದರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ ಎಂದರು.


Share: