ಭಟ್ಕಳ, ಅಕ್ಟೋಬರ್ 7: ಕಳೆದ ದಿನಗಳಲ್ಲಿ ಕಾರವಾರ ಹಾಗೂ ಸುತ್ತಮುತ್ತ ನೆರೆಯಿಂದ ಪೀಡಿತರಾದವರ ಕ್ಷೇಮ ವಿಚಾರಿಸಲು ಭಟ್ಕಳದ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹೆಚ್.ಆರ್.ಎಸ್. (Humanitarian Relief Society (HRS) ತಂಡ ಭೇಟಿ ನೀಡಿತು.
North Karnataka Muslim United Forum (NKMUF) ಸಂಘಟನೆಯ ಅಧ್ಯಕ್ಷರಾದ ಆಲಿ ಯವರು ತಂಡದ ಜೊತೆಗೆ ಪಯಣಿಸಿ ನೆರೆಸಂತ್ರಸ್ತರನ್ನು ಭೇಟಿಯಾದರು.

ಪಕ್ಕದ ಕಾರವಾರದಿಂದ ತಮ್ಮ ಯೋಗಕ್ಷೇಮ ವಿಚಾರಿಸಲು ಯಾರು ಬರದೇ ಇರುವಾಗ ದೂರದ ಭಟ್ಕಳದಿಂದ ತಮ್ಮ ಯೋಗಕ್ಷೇಮ ವಿಚಾರಿಸಲು ಬಂದಿರುವುದನ್ನು ಅರಿತ ಸಂತ್ರಸ್ತರ ಕಣ್ಣಿನಿಂದ ಆನಂದಭಾಷ್ಪ ಉದುರಿತ್ತು.
ನೆರೆ ತನ್ನ ತೆಕ್ಕೆಗೆ ಬಂದ ಎಲ್ಲರ ಮನೆಗಳನ್ನು ಜಾತಿಮತಬೇಧವಿಲ್ಲದೇ ನಾಶಗೊಳಿಸಿದೆ. ಈಗ ಮಾನವತೆಯೇ ಎಲ್ಲರ ಜೊತೆಯಾಗಿದ್ದು ಒಬ್ಬರಿಗೊಬ್ಬರು ಸಹಕರಿಸುತ್ತಿದ್ದಾರೆ. ನೆರೆಯಿಂದ ಪ್ರಭಾವಿತ ಪ್ರದೇಶಗಳಿಗೆ ಇದುವರೆಗೂ ಕಾರವಾರದ ನಾಯಕರಾಗಲೀ ರಾಜಕೀಯ ಧುರೀಣರಾಗಲೀ ಹಾಜರಾಗದೇ ಇರುವುದು ಸಂತ್ರಸ್ತರಲ್ಲಿ ಅಸಮಾಧಾನ ಮೂಡಿಸಿದೆ. ಈಗ ಅವರಿಗೆ ಸಾಂತ್ವಾನಕ್ಕಿಂತಲೂ ಅಗತ್ಯವಸ್ತುಗಳು ತುರ್ತಾಗಿ ಬೇಕಾಗಿದ್ದು ಅವರ ಅಗತ್ಯಗಳಿಗೆ ಸ್ಪಂದಿಸಿದ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ನೆರವು ನೀಡುವ ಸಂಕಲ್ಪ ತೊಟ್ಟಿದೆ. ಸಾಹಿಲ್ ಆನ್ಲೈನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಜಮಾತ್ ಇಸ್ಲಾಮಿ ಹಿಂದ್ ಸಂಘಟನೆಯ ಮೌಲಾನಾ ಎಸ್.ಎಂ. ಸೈಯದ್ ಜುಬೇರ್ ರವರು ಸಂಘಟನೆಯ ವತಿಯಿಂದ ಸಾಧ್ಯವಾದ ನೆರವು ಒದಗಿಸುವ ಭರವಸೆ ನೀಡಿದರು.





ಸಂತ್ರಸ್ತ ಬಾಂಧವರಿಗೆ ನೆರವು ನೀಡಬಯಸುವವರು ಭಟ್ಕಳದ ಸುಲ್ತಾನ್ ಸ್ಟ್ರ್ಈಟ್ ನಲ್ಲಿರುವ ದಾವತ್ ಸೆಂಟರ್ ನಲ್ಲಿರುವ ಕಛೇರಿಯಲ್ಲಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ. ಹಾಗೂ ಸಂತ್ರಸ್ತರಿಗೆ ಸಾಧ್ಯವಾದ ನೆರವು ನೀಡುವಂತೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರಿಗೂ ಅವರು ನೆರವು ನೀಡುವಂತೆ ಕೋರಿದ್ದಾರೆ.
ಈ ನಿಟ್ಟಿನಲ್ಲಿ ಸಾಹಿಲ್ ಆನ್ಲೈನ್ ತಂಡವೂ ತನ್ನ ಸಹಕಾರವನ್ನು ವ್ಯಕ್ತಪಡಿಸಿದೆ. ಸಾಹಿಲ್ ತಂಡದ ಪ್ರತಿನಿಧಿ ನಸೀಫ್ ಇಕ್ಕೇರಿಯವರನ್ನು ಅವರ ದೂರವಾಣಿ 9986 500 303 ಮೂಲಕ ಸಂಪರ್ಕಿಸಿ ದಾವತ್ ಸಂಟರ್ ಗೆ ಕಳುಹಿಸುವ ನೆರವಿನ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.