ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹರೇಕಳ ಶಾಲೆಯ ಆಟದ ಮೈದಾನ ಉದ್ಘಾಟನೆ: ಹಾಜಬ್ಬರ ಶ್ರಮಕ್ಕೆ ಬೆರಗಾಗಿದ್ದೇನೆ: ನಳಿನ್‌ಕುಮಾರ್ ಕಟೀಲ್

ಹರೇಕಳ ಶಾಲೆಯ ಆಟದ ಮೈದಾನ ಉದ್ಘಾಟನೆ: ಹಾಜಬ್ಬರ ಶ್ರಮಕ್ಕೆ ಬೆರಗಾಗಿದ್ದೇನೆ: ನಳಿನ್‌ಕುಮಾರ್ ಕಟೀಲ್

Sat, 07 Nov 2009 03:23:00  Office Staff   S.O. News Service
ಮಂಗಳೂರು, ನ. ೬: ಅಕ್ಷರ ಕ್ರಾಂತಿಯ ಸಂತ ಹರೇಕಳ ಹಾಜಬ್ಬರ ಶ್ರಮವನ್ನು ಕಂಡು ನಾನು ಬೆರಗಾಗಿದ್ದೇನೆ. ಹಾಜಬ್ಬರ ಹೃದಯ ಶ್ರೀಮಂತಿಕೆಯಿಂದಾಗಿ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹಾಜಬ್ಬರನ್ನು ಶ್ಲಾಘಿಸಿದ್ದಾರೆ. 

ಶುಕ್ರವಾರ ಹರೇಕಳ ನ್ಯೂಪಡ್ಪುವಿನ ಸರಕಾರಿ ಶಾಲೆಯ ಆಟದ ಮೈದಾನದ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಗೆ ತನ್ನಿಂದಾಗುವ ಸಹಾಯ ಮಾಡುವುದಾಗಿ ಭರವಸೆ ನೀಡಿ  ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಟಿ. ಖಾದರ್, ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಹರೇಕಳ ಹಾಜಬ್ಬರು ಮಾದರಿಯಾಗಿದ್ದಾರೆ ಎಂದು ಹೇಳಿದರು.  

ಶಿಕ್ಷಣದ ಅಭಿವೃದ್ಧಿಗೆ ಸರಕಾರದ ಅನೇಕ ಯೋಜನೆಗಳಿವೆ. ಅದನ್ನು ದಕ್ಕಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಶಾಲಾ ಭಿವೃದ್ಧಿ ಸಮಿತಿಯ ಅಧ್ಯಕ್ಷರು ಮಾಡಬೇಕು. ಇದು ಸರಕಾರಿ ಶಾಲೆಯಾದರೂ ಕೂಡ, ಹಾಜಬ್ಬರ ಶ್ರಮ ವಹಿಸಿದ ಕಾರಣ ಇದನ್ನು ಹಾಜಬ್ಬರ ಶಾಲೆ ಎಂದೇ ಹೇಳಲಾಗುತ್ತದೆ. ಈ ಶಾಲೆ ಮತ್ತು ಹರೇಕಳ ಹಾಜಬ್ಬರು ರಾಷ್ಟ್ರಮಟ್ಟದಲ್ಲೂ ಇದೀಗ ಗುರುತಿಸಲ್ಪಟ್ಟಿದ್ದಾರೆ. ಹಾಗಾಗಿ ಈ ಶಾಲೆಯ ಅಭಿವೃದ್ಧಿಗಾಗಿ ಕೇಂದ್ರದ ಯೋಜನೆಗಳನ್ನು ಬಳಸಲು ಪ್ರಯತ್ನಿಸೋಣ ಎಂದರು.

ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಸಂತೋಷ್‌ಕುಮಾರ್ ಭಂಡಾರಿ, ಜಿ.ಪಂ. ಸದಸ್ಯ ಅಝೀಝ್ ಮಲಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಮಂಗಳೂರು ತಾ.ಪಂ.ಅಧ್ಯಕ್ಷ ರಾಮಚಂದ್ರ ಕುಂಪಲ, ಜಿ.ಪಂ. ಉಪಕಾರ್ಯ ದರ್ಶಿ ಮುಹಮ್ಮದ್ ನಝೀರ್, ಡಿಡಿಪಿ‌ಐ ಚಾಮೇಗೌಡ, ಬಿ‌ಇ‌ಓ ಗೋವಿಂದ ಮಡಿವಾಳ, ಹರೇಕಳ ಗ್ರಾ.ಪಂ. ಅಧ್ಯಕ್ಷ ಮಹಾಬಲ ಹೆಗ್ಡೆ, ಉದ್ಯಮಿಗಳಾದ ಹಾಜಿ ಬಿ.ಕುಂಞಿ ಅಹ್ಮದ್, ಅಬ್ದುಲ್     ರವೂಫ್ ಪುತ್ತಿಗೆ, ಬಳ್ಳಾರಿಯ ಸಿದ್ಧಬಸಪ್ಪ, ಶಿಕ್ಷಣ ಪ್ರೇಮಿ ರಫಿಕ್     ಮಾಸ್ಟರ್, ಹೈದರ್     ಪರ್ತಿಪ್ಪಾಡಿ      ಮತ್ತಿತರರು     ಉಪಸ್ಥಿತರಿದ್ದರು.

ಶಾಲೆಯ ರುವಾರಿ ಹರೇಕಳ ಹಾಜಬ್ಬ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಮುಖ್ಯೋಪಾಧ್ಯಾಯಿನಿ ಚಿತ್ರಲೇಖ ಸ್ವಾಗತಿಸಿದರು. ಯುವ ಲೇಖಕ ಇಸ್ಮತ್ ಫಜೀರ್ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜು ಬೇಕು

ಶಾಲೆಗಾಗಿ ೯ ವರ್ಷಗಳ  ಹಿಂದೆ ೧.೧೯ ಎಕ್ರೆ ಜಾಗವನ್ನು ಸುಮಾರು ೧೨ ಲಕ್ಷಕ್ಕೂ ಅಧಿಕ ಮೊತ್ತ ನೀಡಿ ಖರೀದಿಸಿರುವ ಹರೇಕಳ ಹಾಜಬ್ಬ, ಶಾಲೆ ಮತ್ತು ವೈಯಕ್ತಿಕವಾಗಿ ತನಗೆ ದೊರೆತ ಎಲ್ಲ ಹಣವನ್ನು ಮತ್ತೆ ಶಾಲೆಯ ಅಭಿವೃದ್ಧಿಗಾಗಿ ಬಳಸಿದ್ದಾರೆ. 

೨೮ ಮಕ್ಕಳಿಂದ ಆರಂಭಿಸಿದ ಈ ಶಾಲೆಯಲ್ಲಿ ಇದೀಗ ೩೨೩ ವಿದ್ಯಾರ್ಥಿಗಳಿದ್ದಾರೆ. ೨೦೧೦- ೧೧ನೆ ಸಾಲಿನಲ್ಲಿ ಇಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸುವ ಕನಸನ್ನು ಕಂಡಿರುವ ಹಾಜಬ್ಬ, ಶುಕ್ರವಾರ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ಎದುರು ತಮ್ಮ ಈ ಬೇಡಿಕೆಯನ್ನು  ಮುಂದಿಟ್ಟಿದ್ದಾರೆ.

Share: