ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವೈದ್ಯ ಮೇಲಿನ ಅತ್ಯಾಚಾರ, ಕೊಲೆ ಖಂಡನೆ ಇಂದು ರಾಜ್ಯಾದ್ಯಂತ ಒಪಿಡಿ ಬಂದ್

ವೈದ್ಯ ಮೇಲಿನ ಅತ್ಯಾಚಾರ, ಕೊಲೆ ಖಂಡನೆ ಇಂದು ರಾಜ್ಯಾದ್ಯಂತ ಒಪಿಡಿ ಬಂದ್

Sat, 17 Aug 2024 14:10:41  Office Staff   Vb

ಬೆಂಗಳೂರು: ಕೋಲ್ಕತ್ತಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ರಾಷ್ಟ್ರವ್ಯಾಪಿ ಕರೆ ನೀಡಿರುವ ವೈದ್ಯರು ಹೊರರೋಗಿ ವಿಭಾಗ (ಒಪಿಡಿ) ಬಂದ್ ಹಿನ್ನೆಲೆ ಯಲ್ಲಿ ಕರ್ನಾಟಕದಲ್ಲಿಯೂ ಆ.17ರಂದು ಒಪಿಡಿ ಬಂದ್‌ ಆಗಲಿದೆ. ಆ.17 ಬೆಳಗ್ಗೆ 6 ರಿಂದ ಆ.18 ಬೆಳಗ್ಗೆ 6 ಗಂಟೆಯ ವರೆಗೂ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ತುರ್ತು ಹಾಗೂ ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳ ವಿಭಾಗವನ್ನು ಮುಚ್ಚಲಾಗುವುದು. ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ವೈದ್ಯಕೀಯ ಸಂಸ್ಥೆಗಳು ಮುಚ್ಚಲಿವೆ. ಇದಕ್ಕೆ ಆಸ್ಪತ್ರೆಗಳು, ಖಾಸಗಿ ಚಿಕಿತ್ಸಾಲಯಗಳು ಪೂರ್ಣ ಬೆಂಬಲ ನೀಡಲಿವೆ ಎಂದು ಐಎಂಐ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್ (ಫನಾ), ಫನಾ ಬೆಂಬಲಿತ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆರ್ಥೋಪೆಡಿಕ್ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಸಂಘ, ಕರ್ನಾಟಕ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್(ಕೆಎಆರ್‌ಡಿ) ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ವೈದ್ಯರ ಮುಷ್ಕರದಿಂದಾಗಿ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮಕ್ಕೆ ಸೂಚಿಸಲಾಗಿದೆ. ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಚರ್ಚಿಸಲು ಹೇಳಿದ್ದೇನೆ. ತೊಂದರೆಯಾಗದಂತೆ ಪ್ರತಿಭಟನೆ ಮಾಡುತ್ತೇವೆಂದು ವೈದ್ಯರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು. ಎಲ್ಲ ಅಸೋಸಿಯೇಶನ್‌ ಸಭೆ ಕರೆದು ಕ್ರಮದ ಬಗ್ಗೆ ಚರ್ಚಿಸುತ್ತೇನೆ. । ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಕೂಡಾ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ವೈದ್ಯಕಿಯ ಕಾಲೇಜಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕಲಿದ್ದಾರೆ. ಹೀಗಾಗಿ, ಖಾಸಗಿ ಆಸ್ಪ ತ್ರೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕಿಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಶ್ರೀನಿವಾಸ್, 'ದೇಶದಲ್ಲಿ ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದರಿಂದಾಗಿ ಅಸುರಕ್ಷಿತ ವಾತಾವರಣದಲ್ಲಿ ಕರ್ತವ್ಯ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಈ ರೀತಿ ನಡೆಯದಂತೆ ಕೇಂದ್ರ ಸರಕಾರ, ವೈದ್ಯರ ಸುರಕ್ಷತೆಗೆ ತಕ್ಷಣ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು' ಎಂದು ಆಗ್ರಹಿಸಿದರು.


Share: