ಕಾಸರಗೋಡು, ಎ.೧೬: ಹಾಡುಹಗಲೇ ಜ್ಯುವಲ್ಲರಿಗೆ ನುಗ್ಗಿದ ಕಳ್ಳರು ೧೮ ಕಿಲೋ ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನ ಕಾಞಂಗಾಡಿನಲ್ಲಿ ನಡೆದಿದೆ.
ಕಾಞಂಗಾಡು ನಗರದಲ್ಲಿರುವ ಕಟ್ಟಡವೊಂದರ ನೆಲಅಂತಸ್ತಿನಲ್ಲಿರುವ ರಾಜಧಾನಿ ಜ್ಯುವೆಲ್ಲರಿಯಿಂದ ಈ ಕಳ್ಳತನ ನಡೆದಿದೆ. ಮಧ್ಯಾಹ್ನ ೧೨:೩೦ರಿಂದ ೨ರ ನಡುವೆ ಈ ಕೃತ್ಯ ನಡೆದಿದೆ ಎಂದು ಮಾಲಕ ಅಬ್ದುಲ್ ಕರೀಂ ತಿಳಿಸಿದ್ದಾರೆ.
ಶುಕ್ರವಾರವಾದುದರಿಂದ ಜ್ಯುವೆಲ್ಲರಿ ಸಿಬ್ಬಂದಿಗಳು ಮಸೀದಿಗೆ ತೆರಳಿದ ಸಂದರ್ಭದಲ್ಲಿ ದರೋಡೆ ನಡೆದಿದೆ. ಜ್ಯುವೆಲ್ಲರಿ ಸಿಬ್ಬಂದಿಗಳು ಮಧ್ಯಾಹ್ನ ೨ ಗಂಟೆಗೆ ಶೆಟರ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಜ್ಯುವಲ್ಲರಿ ಹೊಂದಿರುವ ಕಟ್ಟಡದ ಒಂದನೆ ಮಹಡಿಯಲ್ಲಿರುವ ಎಲೆಕ್ಟ್ರಿಕಲ್ ಉಪಕರಣ ರಿಪೇರಿ ಅಂಗಡಿ ನಿನ್ನೆ ಹಾಗೂ ಇಂದು ಬಂದ್ ಇತ್ತು. ದರೋಡೆಕೋರರು ಈ ಅಂಗಡಿಯ ಬೀಗ ಮುರಿದು ಒಳ ನುಗ್ಗಿ ನೆಲ ಕೊರೆದು ಜ್ಯುವೆಲ್ಲರಿಯೊ ಳಗೆ ಪ್ರವೇಶಿಸಿ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಕೋರರು ಸುಮಾರು ೩ ಕೋಟಿ ರೂ. ಮೌಲ್ಯದ ಚಿನ್ನಾಭರಣ ವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯವಸ್ಥಿತ ರೀತಿಯಲ್ಲಿ ಈ ದರೋಡೆ ನಡೆಸಿರು ವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ದರೋಡೆ ಕೋರರು ನಿನ್ನೆ ರಾತ್ರಿಯೇ ಎಲೆಕ್ಟ್ರಿಕಲ್ ಉಪಕರಣ ರಿಪೇರಿ ಅಂಗಡಿ ನುಗ್ಗಿ ಕೋಣೆಯ ನೆಲ ಕೊರೆದಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳದಿಂದ ಗ್ಲೌಸ್ ಮತ್ತು ನೆಲಕೊರೆಯುವ ಉಪಕರಣ ಪತ್ತೆಯಾಗಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಜ್ಯುವೆಲ್ಲರಿ ಮೆನೇಜರ್ ಹುಸೈನಾರ್ ಕಾಞಂಗಾಡ್ ಪೊಲೀಸರಿಗೆ ನೀಡಿದ ದೂರಿನಂತೆ ನಗರಾದ್ಯಂತ ನಾಕಾಬಂಧಿ ಏರ್ಪಡಿಸಿದ್ದು, ಹಲವು ವಾಹನಗಳನ್ನು ತಪಾಸಣೆಗೈಯಲಾಗಿದೆ.
ಘಟನಾ ಸ್ಥಳಕ್ಕೆ ಕಾಞಂಗಾಡ್ ಡಿವೈಎಸ್ಪಿ ಪಿ.ಜೋಯ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಅಶ್ರಫ್, ಸಬ್ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆರಳಚ್ಚು ತಜ್ಞರು, ಶ್ವಾನ ದಳದವರು ಸ್ಥಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಎರಡನೆ ಅತಿದೊಡ್ಡ ಚಿನ್ನಾಭರಣ ದರೋಡೆ ಪ್ರಕರಣ ಇದಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಪೆರಿಯ ನಾರ್ತ್ ಮಲಬಾರ್ ಬ್ಯಾಂಕ್ಗೆ ನುಗ್ಗಿದ ಕಳ್ಳರು ೩೨ ಕೆ.ಜಿ.ಚಿನ್ನಾಭರಣವನ್ನು ದರೋಡೆ ಮಾಡಿದ್ದರು.
ಇದಲ್ಲದೆ ಕೆಲ ತಿಂಗಳ ಹಿಂದೆ ಪಳ್ಳಿಕೆರೆಯ ಖಾಸಗಿ ಹಣಕಾಸು ಸಂಸ್ಥೆಗೆ ಹಾಡಹಗಲೇ ನುಗ್ಗಿದ ಕಳ್ಳರು ೧೧೩ ಪವನ್ ಚಿನ್ನಾಭರಣ ಕಳವು ಗೈದಿರುವುದನ್ನು ಇಲ್ಲಿ ಸ್ಮರಿಸಬಹುದು