ಭಟ್ಕಳ, ನವೆಂಬರ್ 5: ಕಳೆದ ವಾರ ನಗರದ ಪ್ರಥಮ ದರ್ಜೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುವುದನ್ನು ವಿರೋಧಿಸಿದ್ದ ಮುಸ್ಲಿಮೇತರ ವಿದ್ಯಾರ್ಥಿಗಳು ಬೆದರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಸಿಡಿಸಿ ಸಭೆಯೊಂದನ್ನು ಕರೆಯಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ಭಟ್ಕಳ ಎಂ.ಎಲ್.ಎ. ಈ ಪ್ರಕರಣವನ್ನು ಈಗ ಸರ್ಕಾರದ ನಿರ್ಧಾರಕ್ಕೆ ವಹಿಸಿದ್ದು ಅಲ್ಲಿಯವರೆಗೆ ಯಾವುದೇ ಸಮವಸ್ತ್ರ ಕಡ್ಡಾಯಾವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಯವರಿಗೆ ಮತ್ತು ಶಿಕ್ಷಣಾ ಇಲಾಖೆಯ ನಿರ್ದೇಶಕರಿಗೆ ವಹಿಸಲಾಗಿದ್ದು ಸಮಿತಿ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಯಾವುದೇ ವಿದ್ಯಾರ್ಥಿ ಸಮವಸ್ತ್ರ ಅಥವಾ ಬುರ್ಖಾ ವಿಷಯವನ್ನು ಕೆಣಕಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಐ.ಆರ್. ಖಾನ್, ಫಾರೂಖ್ ಶೇಖ್, ಸೋಮಯ್ಯಗೊಂಡ, ಸೋಮತಿ ಶೆಟ್ಟಿ, ಡಿಕೋಸ್ಟಾ, ವಿಠ್ಠಲ ನಾಯಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಭೆಯ ಬಳಿಕ ಶಾಸಕ ಜೆ.ಡಿ.ನಾಯ್ಕರನ್ನು ಭೇಟಿಯಾದ ಮುಸ್ಲಿಮೇತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು. ಘೇರಾವ್ ಹಾಕಿದವರಲ್ಲಿ ವಿದ್ಯಾರ್ಥಿನಿಯರಾದ ಉಷಾ ಪಂಡಿತ್, ಉಷಾ ನಾಯಕ್, ಪಲ್ಲವಿ ನಾಯಕ್, ಜಾನಕಿ ಮತ್ತು ಯೆಮ್ಮು ಪ್ರಮುಖರಾಗಿದ್ದರು. ಬುರ್ಖಾ ವಿವಾದವನ್ನೇ ದೊಡ್ಡದನ್ನಾಗಿಸಿ ಕಾಲೇಜಿನ ಸಮವಸ್ತ್ರವನ್ನು ನಿಷೇಧಿಸುವುದು ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಭೆಗೆ ಮುನ್ನ ಆಗಮಿಸಿದ ಜೆ.ಡಿ.ನಾಯ್ಕರನ್ನು ಹಲವು ವಿದ್ಯಾರ್ಥಿಗಳು ಘೇರಾವ್ ಹಾಕಿ ತಮ್ಮ ಏಕಸಮವಸ್ತ್ರದ ಬೇಡಿಕೆಯನ್ನು ಈಡೇರಿಸಲು ಘೋಷಣೆಗಳನ್ನು ಕೂಗಿದ್ದರು. ಆದರೆ ಪೋಲೀಸರು ಮಧ್ಯೆ ಪ್ರವೇಶಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಕಾಲೇಜು ಪ್ರಾರಂಭವಾಗಿ ಈಗ ಮೂರು ವರ್ಷ ಕಳೆದಿದ್ದು ಈ ಹಿಂದೆ ಎಂದಿಗೂ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುತ್ತಿದ್ದ ಬಗ್ಗೆ ಆಕ್ಷೇಪ ಬಂದಿರಲಿಲ್ಲ. ಆದರೆ ವಿದ್ಯಾರ್ಥಿಯ ಮೂಲಭೂತ ಹಕ್ಕಿಗೇ ಸಂಚಕಾರ ಬಂದಿರುವುದು ಭಟ್ಕಳದ ಪಾಲಿಗೆ ಪ್ರಥಮ ಬಾರಿಯಾಗಿದೆ.
ನಮ್ಮ ಪ್ರತಿನಿಧಿ ವರದಿ.