ಭಟ್ಕಳ, ಅಕ್ಟೋಬರ್ 7:ಭಟ್ಕಳ ತಾಲೂಕಿನ ಅಭಿವೃದ್ಧಿ ಕುರಿತು ಚರ್ಚಿಸಲ್ಪಡುವ ಮಾಸಿಕ ಕೆ.ಡಿ.ಪಿ. ಸಭೆಗೆ ಹೆಚ್ಚಿನ ಅಧಿಕಾರಿಗಳು ಗೈರು ಆಗುತ್ತಿದ್ದು ಇದಕ್ಕೆ ತಾ.ಪಂ.ಅಧ್ಯಕ್ಷೆ ಗೌರಿ ಮೋಗೆರ್ ತೀರ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದು ಮುಂದಿನ ಸಭೆಗಳಲ್ಲಿ ಹೀಗಾದರೆ ಅಂತಹ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳಿಗೆ ದೂರನ್ನು ನೀಡುವುದಾಗಿ ಅವರು ಸೂಚಿಸಿದ್ದಾರೆ. ತಾ.ಪಂ.ಸಭಾಭವನದಲ್ಲಿ ಜರುಗಿದ ಮಾಸಿಕ ಕೆ.ಡಿ.ಪಿ.ಸಭೇಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ತಿಂಗಳು 5ನೇ ತಾರೀಕಿನಂದು ಜರುಗುವ ಕೆ.ಡಿ.ಪಿ ಮಾಸಿಕ ಸಭೆಯಲ್ಲಿ ಹೆಚ್ಚಿನ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು ತಾಲೂಕಿನ ಅಭಿವೃದ್ಧಿಯ ಕುರಿತು ಚರ್ಚಿಸುವುದಾದರೂ ಹೇಗೆ? ಅಧಿಕಾರಿಗಳಿಗಾಗಿ ಜನಪ್ರತಿನಿಧಿಗಳು ಕಾಯುವಂತಹ ಪರಿಸ್ಥಿತಿಯು ಇಲ್ಲಿ ನಿರ್ಮಾಣವಾಗಿದ್ದು ಇನ್ನು ಮುಂದೆ ಸಭೆಗೆ ತಡವಾಗಿ ಬಂದರೂ ಸಹ ಅಂತಹವನ್ನು ಗೈರು ಎಂದು ಪರಿಗಣಿಸಿ ಅಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ವರದಿಯನ್ನು ನೀಡಲಾಗುವುದು ಎಂದು ಅವರು ಸಭೆಯಲ್ಲಿ ತಿಳಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸುವ ಕೆ.ಡಿ.ಪಿ. ಸಭೆಗೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ತಮ್ಮ ಇಲಾಖೆಯ ವರದಿಯನ್ನು ಒಪ್ಪಿಸಬೇಕು ಒಂದುವೇಳೆ ಹಾಗೇನಾದರೂ ಆಗಿದ್ದಲ್ಲಿ ಮೊದಲೆ ಲಿಖಿತವಾಗಿ ತಿಳಿಸಬೇಕು ಎಂದರು.
ಸಮಾಜಕಲ್ಯಾಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ವಸತಿನಿಲಯ, ಶಾಶ್ವತ ಪಡಿತರ ಚೀಟಿ, ಸರಕಾರಿ ಬಸ್ ಡಿಪೋ ಅವ್ಯವಸ್ಥೆ, ಹದಗೆಟ್ಟ ರಾ.ಹೆ.೧೭, ಮುಂತಾದ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಾಡುವಳ್ಳಿ ಹಾಗೂ ಮಾರುಕೇರಿ ಗ್ರಾ..ಪಂ ಅಧ್ಯಕ್ಷರು ಉಪಸ್ಥಿತರಿದ್ದರು.
ವರದಿ: ಮಾನ್ವಿ.