ಬೆಂಗಳೂರು,ಏ,೨೦: ಐಪಿಎಲ್ ಟ್ವೆಂಟಿ _ ೨೦ ಕ್ರಿಕೆಟ್ ಪಚಿದ್ಯದ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡವಿಲ್ಲ ಎಂದು ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ ಇಂದಿಲ್ಲಿ ಸ್ಪಷ್ಟಪಡಿಸಿದರು.
ಹಿಂದೆ ಬೇರೆಯದೇ ಕಾರಣಗಳಿರಬಹುದು. ತನಿಖೆಯಿಂದ ಸತ್ಯಸಂಗತಿ ಹೊರಬರಲಿದೆ. ಯಾವುದೇ ಭಯೋತ್ಪಾದಕ ಸಂಘಟನೆಯ ಪಾತ್ರ ಇದರಲ್ಲಿ ಇಲ್ಲ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಡಾ: ಅಜಯ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಮುಂಬೈಗೆ ಸ್ಧಳಾಂತರಿಸಿರುವುದಕ್ಕೆ ಭದ್ರತಾ ವಿಚಾರಗಳು ಕಾರಣವಲ್ಲ. ಬೆಟ್ಟಿಂಗ್ ಲಾಬಿ ಇದರ ಹಿಂದೆ ಕೆಲಸ ಮಾಡಿರಬಹುದು. ಸ್ಧಳಾಂತರವಾಗಿರುವುದಕ್ಕೆ ಬೇಸರವೂ ಆಗಿಲ್ಲ. ಅಸಮಾಧಾನವೂ ಉಂಟಾಗಿಲ್ಲ ಎಂದರು.
ಬಾಂಬ್ ಸ್ಪೋಟದ ನಂತರವೂ ಕ್ರಿಕೆಟ್ ಪಂದ್ಯವನ್ನು ನಡೆಸಲು ಅವಕಾಶ ನೀಡಿದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಇದೊಂದು ಒಳ್ಳೆಯ ನಿರ್ಧಾರ. ಭಯದ ವಾತಾವರಣ ಸೃಷ್ಟಿಸಿದ್ದಲ್ಲಿ ಗೇಟುಗಳಲ್ಲಿ ಪ್ರೇಕ್ಷಕರು ತುಳಿತಕ್ಕೆ ಒಳಗಾಗುತ್ತಿದ್ದರು ಎಂದರು.
ಪಂದ್ಯಗಳನ್ನು ಮುಂಬಯಿಗೆ ಸ್ಥಳಾಂತರಿಸಿದ್ದು ಭದ್ರತೆ ದೃಷ್ಟಿಯಿಂದಲ್ಲ. ಇದಕ್ಕೆ ಬೇರೆಯದೇ ಕಾರಣಗಳಿರಬಹುದು. ಆ ಕಾರಣಗಳು ಯಾವುದೆಂಬುದನ್ನು ಐಪಿಎಲ್ ಪದಾಧಿಕಾರಿಗಳನ್ನೇ ಕೇಳಬೇಕೆಂದು ಹೇಳಿದರು.
ಬಾಂಬ್ ಸ್ಪೋಟದ ಪ್ರಕರಣಕ್ಕೆ ಬಾಜಿದಾರರ ಕೈವಾಡವೂ ಇರಬಹುದು. ಅದನ್ನು ತಳ್ಳಿಹಾಕಲಾಗದು. ಆ ದೃಷ್ಟಿಕೋನದಿಂದಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.