ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸರ್ ಎಂ ವಿಶ್ವೇಶ್ವರಯ್ಯ ಹುಟ್ಟೂರಿನಲ್ಲಿ ಐಐಟಿ ಸ್ಥಾಪಿಸಲು ಸರ್ಕಾರದ ಒಲವು - ಮೊಯ್ಲಿ

ಬೆಂಗಳೂರು: ಸರ್ ಎಂ ವಿಶ್ವೇಶ್ವರಯ್ಯ ಹುಟ್ಟೂರಿನಲ್ಲಿ ಐಐಟಿ ಸ್ಥಾಪಿಸಲು ಸರ್ಕಾರದ ಒಲವು - ಮೊಯ್ಲಿ

Sun, 27 Sep 2009 02:37:00  Office Staff   S.O. News Service
ಬೆಂಗಳೂರು, ಸೆ.26: ಸರ್.ಎಂ.ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿ ಸೇರಿದಂತೆ ದೇಶದ ವಿವಿಧೆಡೆ ೧೧ನೆ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಐ‌ಐಟಿ ಹಾಗೂ ಐ‌ಐ‌ಎಂಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ನಗರದಲ್ಲಿ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ರಾಜ್ಯ ಶಾಖೆ ಹಮ್ಮಿಕೊಂಡಿದ್ದ ‘ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳ ಸುಧಾರಣೆ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಐ‌ಐಟಿ ಹಾಗೂ ಐ‌ಐ‌ಎಂಗಳನ್ನು ಸ್ಥಾಪಿಸುವ ಯೋಜನೆ ಕುರಿತು ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್‌ರೊಂದಿಗೆ ಚರ್ಚಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ೧೦ನೆ ಪಂಚ ವಾರ್ಷಿಕ ಯೋಜನೆಯಲ್ಲಿ ದೆಶದ ವಿವಿಧೆಡೆ ೧೦ ಐ‌ಐಟಿ ಹಾಗೂ ಐ‌ಐ‌ಎಂಗಳನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.

ಆಗ ರಾಜ್ಯ ಸರಕಾರ ಅಗತ್ಯ ಭೂಮಿ ಹಾಗೂ ಮೂಲಭೂತ ಸೌಲಭ್ಯ ನೀಡದಿರುವುದರಿಂದಲೆ ರಾಜ್ಯಕ್ಕೆ ಈ ಕೇಂದ್ರಗಳು ಕೈ ತಪ್ಪಿದ್ದವು. ಆದರೆ, ೧೧ನೆ ಪಂಚವಾರ್ಷಿಕ ಯೋಜನೆಯಲ್ಲಿ ಈ ಕೇಂದ್ರಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಎಲ್ಲ ಐ‌ಐಟಿ ಹಾಗೂ ಐ‌ಐ‌ಎಂಗಳಲ್ಲಿ ಶೇ.೫೪ರಷ್ಟು ಮೀಸಲಾತಿ ವಿಸ್ತರಣೆಗೆ ಸಲಹೆ ಮಾಡಲಾಗಿದೆ ಎಂದರು.

ಹೈಕೋರ್ಟ್ ಮಟ್ಟದಲ್ಲಿ ವಾಣಿಜ್ಯ ನ್ಯಾಯಾಲಯ ಪ್ರಾರಂಭಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಲಾಗುವುದು ಎಂದರು.

ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಉನ್ನತ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸಂವಿಧಾನದ ನಿಯಮಗಳ ಪ್ರಕಾರವೆ ನಡೆದುಕೊಳ್ಳಲಾಗುತ್ತದೆ. ಭಾರತದ ನ್ಯಾಯಾಂಗ ವ್ಯವಸ್ಥೆಗೆ ವಿಶ್ವದಲ್ಲೆ ಮೊದಲ ಸ್ಥಾನವಿದೆ ಎಂದು ಮೊಯ್ಲಿ ಹೇಳಿದರು.

Share: