ಭಟ್ಕಳ: ವ್ಯಕ್ತಿಯೋರ್ವರ ಅಂಗಡಿಗೆ ಮಹಿಳೆಯರಿಬ್ಬರು ಬಂದು ದರೋಡೆ ಮಾಡುವ ಉದ್ದೇಶದಿಂದ ಅಂಗಡಿಕಾರನನ್ನು ಪರಿಚಯ ಮಾಡಿಕೊಂಡು ಮೊಬೈಲ್ ನಂಬ್ರವನ್ನು ಪಡೆದುಕೊಂಡು ನಂತರ ರಾತ್ರಿ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ನಾಲ್ವರು ಸೇರಿ ನಗದು ೨೩,೮೫೦/- ಫೋನ್ ಪೇ ಮೂಲಕ ೪೯,೦೦೦/- ರೆಡ್ಮಿ ನೊಟ್ ೧೦ ಮೊಬೈಲ್ ೩೦,೦೦೦/- ದರೋಡೆ ಮಾಡಿಕೊಂಡು ಹೋಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಶಕೀಲ್ ಎನ್ನುವವರು ದೂರು ನೀಡಿದ್ದಾರೆ.
ದರೋಡೆ ಮಾಡಿದ ಆರೋಪಿಗಳಲ್ಲಿ ಓರ್ವಳ ಹೆಸರು ಫರ್ಜಾನಾ ಹಾಗೂ ಕಾರು ಚಾಲಕನ ಹೆಸರು ಮುರ್ಜುಜಾ ಎಂದು ತಿಳಿದು ಬಂದಿದ್ದು ಇನ್ನಿಬ್ಬರ ಹೆಸರು ವಿಳಾಸ ತಿಳಿದು ಬಂದಿಲ್ಲ ಎನ್ನಲಾಗಿದೆ. ವಸ್ತುಗಳನ್ನು ಖರೀಧಿಸುವ ನೆಪದಲ್ಲಿ ಅಂಗಡಿಗೆ ಬಂದು ಫೋನ್ ನಂಬ್ರವನ್ನು ಪಡೆದುಕೊಂಡು ರಾತ್ರಿ ಬಹಳ ಸಲ ಕರೆ ಮಾಡಿ ತಿರುಗಾಡಲು ಹೋಗುವ ಎಂತಾ ತಿಳಿಸಿ ಆತನನ್ನು ಹನೀಫಾಬಾದ್ ಕ್ರಾಸ್ಗೆ ಕರೆಯಿಸಿಕೊಂಡು ಸ್ವಿಪ್ಟ್ ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆಯರು ಇನ್ನೋರ್ವ ಪುರುಷ ಸೇರಿ ಮುರ್ಡೇಶ್ವರ ಸಮೀಪ ಕರೆದುಕೊಂಡು ಹೋಗಿ ಅಲ್ಲಿ ನಾಲ್ವರು ಸೇರಿ ಹಲ್ಲೆ ಮಾಡಿ ನಂತರ ಇವರನ್ನು ದರೋಡೆ ಮಾಡಿದ್ದಲ್ಲದೇ ಹೊನ್ನಾವರ ಸಮೀಪ ಕರೆದುಕೊಂಡು ಹೋಗಿ ಮೊಬೈಲ್ನಲ್ಲಿ ವೀಡಿಯೋ ಮಾಡಿಕೊಂಡು ತನ್ನಿಂದ ತಪ್ಪಾಗಿದೆ ಮಹಿಳೆಯ ಮೈಮೇಲೆ ಕೈಮಾಡಿದ್ದೇನೆ ಎಂತೆಲ್ಲಾ ಹೇಳಿಸಿಕೊಂಡು ದೂರು ನೀಡಿದರೆ ವೀಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ರಾತ್ರಿ ೧.೩೦ರ ಸುಮಾರಿಗೆ ವೆಂಕಟಾಪುರ್ ಸೇತುವೆಯ ಮೇಲೆ ಬೀಳಿಸಿ ಹೋಗಿದ್ದಾರೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ ವಿ., ಅವರು ತನಿಖೆ ನಡೆಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕುಂದಾಪುರದ ಸಂಕೇತ ತಿಮ್ಮಪ್ಪ ಪೂಜಾರಿ ಎನ್ನುವವರು ದೂರು ನೀಡಿದ್ದು ದೂರಿನಲ್ಲಿ ಪುರವರ್ಗದ ಮುರ್ತುಜಾ ಮತ್ತು ಇನ್ನಿಬ್ಬರು ಅಪರಿಚತರು ಗಾರೆ ಕೆಲಸ ಮಾಡುವ ಪಿರ್ಯಾದಿಯನ್ನು ಹಡೀನ್ನಲ್ಲಿ ಸಿಮೆಂಟ್ ದಾಸ್ತಾನು ಮಳಿಗೆ ತೋರಿಸುತ್ತೇನೆ ಎಂದು ಕರೆದು ಕೊಂಡು ಹೋಗಿ ಹಡೀನ್ ಹತ್ತಿರ ಆರೋಪಿತರು ಮೂವರು ಸೇರಿ ಪಿರ್ಯಾದಿಯನ್ನು ಹಿಡಿದುಕೊಂಡು ಕುತ್ತಿಗೆಯಲ್ಲಿದ್ದ ೧೦ ಗ್ರಾಮ ತೂಕದ ೬೦,೦೦೦/- ಮೌಲ್ಯದ ಚಿನ್ನದ ಚೈನು, ಎಂ.ಐ. ಕಂಪೆನಿಯ ನೋಟ್೯ ಪ್ರೋ ಮೊಬೈಲ್ ೨೦,೦೦೦/- ಮೌಲ್ಯದ್ದನ್ನು ಬಲವಂತವಾಗಿ ಕಿತ್ತುಕೊಂಡು ಆತನಿಗೆ ದೂಡಿ ಹಾಕಿ ಎರಡು ಸ್ಕೂಟರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಇನ್ಸಪೆಕ್ಟರ್ ಚಂದನ ಗೋಪಾಲ ವಿ, ಅವರು ತನಿಖೆ ನಡೆಸಿದ್ದಾರೆ.
ಎರಡೂ ಪ್ರಕರಣದ ಆರೋಪಿಗಳಾಗ ಪುರವರ್ಗದ ನಿವಾಸಿಗಳಾದ ಮುರ್ತುಜಾ ಹಾಗೂ ರಿಜ್ವಾನ್ ಇಬ್ಬರನ್ನೂ ಬಂಧಿಸಲಾಗಿದ್ದು ದರೋಡೆ ಮಾಡಿದ ವಸ್ತುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಇನ್ನಿಬ್ಬರು ಮಹಿಳೆಯರ ಕುರಿತು ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ.