ದಾಂಡೇಲಿ : ಜಮೀನಿಗೆ ಬೇಲಿ ಹಾಕುವ ವಿಚಾರದಲ್ಲಿ ನಗರದಲ್ಲಿ ಗಲಾಟೆ ನಡೆದಿದೆ. ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳಗಾದ ಮಹಿಳೆ ಸುಧಾ ಪ್ರದೀಪ ನಟೇಶ್ ಎಂಬುವವರು ಆಗಿದ್ದು, ನ್ಯಾಯ ನೀಡುವಂತೆ ಒತ್ತಾಯಿಸಿದ್ದಾರೆ. ನಗರದ ಬಸ್ ನಿಲ್ದಾಣದ ಮುಂಭಾಗದ ಜೆ ಎನ್ ರಸ್ತೆಯ ಪಕ್ಕದಲ್ಲಿ ಈ ವಿಚಾರಕ್ಕೆ ಪರಸ್ಪರ ಜಗಳವಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರೋದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಭಾನುವಾರ ಬೆಳಿಗ್ಗೆ ಇವರು ತಮ್ಮ ಮನೆಯ ಹಿಂಬದಿಯಲ್ಲಿರುವ ತಮ್ಮ ಸ್ವಂತ ಜಾಗದಲ್ಲಿ ಕಂಬ ಹಾಕುತ್ತಿರುವ ಸಂದರ್ಭದಲ್ಲಿ ಪಕ್ಕದ ವಸತಿ ಲಾಡ್ಜ್ ನ ಮಾಲಕ ಅಸ್ಲಾಂ ನೀರಲಗಿ ಎಂಬುವವರು ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈದು, ಸುಧಾ ಪ್ರದೀಪ ನಟೇಶ ಅವರ ಕೈಯನ್ನು ಹಿಡಿದು ಎಳೆದಾಡಿ, ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಚೈನನ್ನು ಹಿಡಿದು ಜಗ್ಗಿ ಹರಿದು, ಕೈಯಿಂದ ಎಡ ಭುಜಕ್ಕೆ ಹೊಡೆದಿದಲ್ಲದೆ , ಎಳೆದಾಡಿ ಅವರು ಧರಿಸಿದ್ದ ವೇಲನ್ನು ಹರಿದು ಅವಮಾನ ಪಡಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಎಸ್ಸಿ- ಎಸ್ಟಿ ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸುವುದಾಗಿ ಬೆದರಿಕೆ ನೀಡುತ್ತಿದ್ದಾನೆ ಎಂದು ಸುಧಾ ಪ್ರದೀಪ್ ನಟೇಶ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.