ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಇಂದಿಗೂ ಪ್ರಸ್ತುತರಾಗಿರುವ ಗಾಂಧೀಜಿ - ಡಾ. ಶಿವರಾಮ ಶೆಟ್ಟಿ

ಮಂಗಳೂರು: ಇಂದಿಗೂ ಪ್ರಸ್ತುತರಾಗಿರುವ ಗಾಂಧೀಜಿ - ಡಾ. ಶಿವರಾಮ ಶೆಟ್ಟಿ

Thu, 15 Oct 2009 03:13:00  Office Staff   S.O. News Service
ಮಂಗಳೂರು, ಅ.15: ದೇಶದ ಬೇರೆ ಬೇರೆ ಧರ್ಮ, ಜನಾಂಗ, ಭಾಷೆಯ ಜನರನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಜಿಯ ವಿಚಾರಧಾರೆ, ಚಿಂತನೆ ಇಂದಿಗೂ ಪ್ರಸ್ತುತ. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿಗೆ ನಾವೆಲ್ಲರು ಮತ್ತಷ್ಟು ಹತ್ತಿರವಾಗೋಣ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಶಿವರಾಮ ಶೆಟ್ಟಿ ಹೇಳಿದರು.

ಬದ್ರಿಯಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮಾ ಗಾಂಧಿ ದಿನಾಚರಣೆಯ ಪ್ರಯುಕ್ತ ಗುರುವಾರ ಅಪರಾಹ್ನ ಬದ್ರಿಯಾ ಕಾಲೇಜಿನ ಗ್ರಂಥಾಲಯದ ಸಭಾಂಗಣದಲ್ಲಿ ಜರುಗಿದ ‘ಶ್ರೇಷ್ಠ ಸಮನ್ವಯಗಾರ ಮಹಾತ್ಮಾ ಗಾಂಧಿ’ ಎಂಬ ವಿಷಯದಲ್ಲಿ ನಡೆಸಲಾದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

‘ದೇಶದ ಜನರು ಧರ್ಮ, ಜನಾಂಗ, ಭಾಷೆಯ ವಿಷಯದಲ್ಲಿ ಛಿದ್ರಗೊಳ್ಳುತ್ತಿದ್ದು, ಇದರಿಂದ ಸಾಂಸ್ಕೃತಿಕ ಬಿಕ್ಕಟ್ಟು ಉಂಟಾಗಿದೆ. ಈ ಸಂದರ್ಭ ಗಾಂಧೀಜಿ ನಮಗೆ ರೂಪಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಸರಳತೆಯನ್ನು ಸಾರಿದ ಗಾಂಧೀಜಿ ಬದಲಾದ ಕಾಲ ಘಟ್ಟದಲ್ಲಿ ಮಹಾತ್ಮಾ ಗಾಂಧೀಜಿ ರಸ್ತೆಗಳು ನಮಗೆ ಎಂ.ಜಿ. ರಸ್ತೆಯಾಗಿ ಮಾರ್ಪಾಟು ಹೊಂದುತ್ತಿರುವುದು ವಿಪರ್ಯಾಸ’ ಎಂದು ಡಾ.ಶೆಟ್ಟಿ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬದ್ರಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ‘ಮನುಷ್ಯರು ಅಗಲಿದರೂ ಅವರ ಸಾಧನೆ ಅಮರವಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿರುವುದು ಸ್ತುತ್ಯಾರ್ಹ್ಯ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯೀಲ್ ಸ್ವಾಗತಿಸಿದರು. ಪ್ರಾಧ್ಯಾಪಕ ಪೊ. ರಹ್ಮತುಲ್ಲಾ ವಂದಿಸಿದರು. ವಿದ್ಯಾರ್ಥಿ ಮುಹಮ್ಮದ್ ಲುಕ್ಮಾನುಲ್ ಹಕೀಂ ಕಾರ್ಯಕ್ರಮ ನಿರ್ವಹಸಿದರು.

Share: