ಕಾರವಾರ, ಜನವರಿ 20: ಅತಿ ಹೆಚ್ಚಾಗಿ ಹಾಳಾಗಿರುವ ಹಾಗೂ ಅಪಘಾತಪೀಡಿತ ರಸ್ತೆಯಾದ ರಾ.ಹೆ. ೧೭ ನ್ನು ಚತುಷ್ಪಥವನ್ನಾಗಿಸುವ ಕಾರ್ಯ ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ National Highway Authority of India (NHAI) ಸಂಸ್ಥೆ ಕುಂದಾಪುರದಿಂದ ಗೋವಾ ಗಡಿಯ ಬಳಿಯ ಮಾಜಳಿ ಎಂಬ ಗ್ರಾಮದವರೆಗಿನ ಹೆದ್ದಾರಿಯನ್ನು ಚತುಷ್ಪಥವನ್ನಾಗಿಸುವ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಗಾವಸಾನಿ ತಿಳಿಸಿದ್ದಾರೆ.
ಈ ಕಾರ್ಯಕ್ಕಾಗಿ ಬಿ.ಒ.ಟಿ.(BOT (Build, Operate and Transfer) ವ್ಯವಸ್ಥೆಯ ಮೂಲಕ ಮಂಗಳೂರಿನಿಂದ ಟೆಂಡರುಗಳನ್ನು ಅಹ್ವಾನಿಸಲಾಗಿದೆ. ಚತುಷ್ಪಥವಾದ ಬಳಿಕ ಹೆದ್ದಾರಿ ಪ್ರತಿ ಬದಿಯಲ್ಲಿಯೂ ಅರವತ್ತು ಅಡಿ ಅಗಲವಾಗಿರುವುದು ಎಂದು ಅವರು ತಿಳಿಸಿದ್ದಾರೆ.
ಕುಂದಾಪುರ -ಸುರತ್ಕಲ್ ನಡುವಣ ಎಪ್ಪತ್ತೈದು ಕಿ.ಮೀ ಹಾಗೂ ನಂತೂರು ಮತ್ತು ತಲಪಾಡಿ (ಕೇರಳ) ನಡುವಣ ಹದಿನೈದು ಕಿ.ಮೀ ದೂರದ ರಸ್ತೆ ಅಗಲಗೊಳಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.