ಮಂಗಳೂರು, ಫೆಬ್ರವರಿ ೬: ಪ್ರಕರಣವೊಂದರ ವಿಚಾರಣೆಗೆಂದು ಆಗಮಿಸಿದ ಬಂಟ್ವಾಳ ಪೊಲೀಸರ ತಂಡ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಮೊನ್ನೆ ತಡರಾತ್ರಿ ಬಂಟ್ವಾಳ ತಾಲೂಕಿನ ಪರ್ಲಿಯಾ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿ ರುವ ಮಹಿಳೆ ಆಯಿಶಾ(40) ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚೆಗೆ ನಡೆದಿದ್ದ ಬಂಟ್ವಾಳದ ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗಾ ಅವರ ಅಂಗಡಿಯ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾ ಗಲೇ ಬಂಧಿತರಾಗಿರುವ ಆರೋಪಿಗಳು ಪರ್ಲಿಯಾ ನಿವಾಸಿ ನೌಶೀರ್(22) ಎಂಬಾತನ ಹೆಸರನ್ನು ಹೇಳಿರುವುದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ಪರ್ಲಿಯಾ ನೌಶೀರ್ ನಾಲ್ಕು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದು, ಅಲ್ಲಿಂದ ಬಂಧಿತ ಆರೋಪಿಗಳಿಗೆ ಕರೆ ಮಾಡಿ ನಾಗೇಂದ್ರ ಬಾಳಿಗಾ ಹತ್ಯೆ ನಡೆಸುವಂತೆ ಹೇಳಿದ್ದ ಎಂಬ ಮಾಹಿತಿಯ ಆಧಾರದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ನಂಜುಂಡೇಗೌಡ ನೇತೃತ್ವದ ಪೊಲೀಸ್ ತಂಡ ಪರ್ಲಿಯಾದ ನೌಶೀರ್ ಮನೆಗೆ ದಾಳಿ ನಡೆಸಿ ಆತನ ತಾಯಿ ಆಯಿಶಾ ಎಂಬಾಕೆಯ ಮೇಲೆ ಹಲ್ಲೆ ನಡೆಸಿದೆ ಎಂದು ಮನೆಮಂದಿ ದೂರಿದ್ದಾರೆ.
ರಾತ್ರಿ ಹನ್ನೊಂದೂವರೆ ಸುಮಾರಿಗೆ ಮನೆಗೆ ಪ್ರವೇಶಿಸಿದ ಪೊಲೀಸರಲ್ಲಿ ಇಬ್ಬರು ಮಾತ್ರ ಯುನಿಫಾರ್ಮ್ ಧರಿಸಿದ್ದು, ಉಳಿದವರು ಸಾಮಾನ್ಯ ಬಟ್ಟೆ ತೊಟ್ಟಿದ್ದರು. ನೌಶೀರ್ನನ್ನು ಕೇಳಿದ ಪೊಲೀಸರು ಆತನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾ ಮನೆಯ ಕೊಠಡಿಗಳನ್ನು ಜಾಲಾಡಲು ಶುರುವಿಟ್ಟು ಕೊಂಡರೆನ್ನಲಾಗಿದೆ. ಈ ವೇಳೆ ಮನೆಯಲ್ಲಿ ಆಯಿಶಾ, ಮತ್ತವರ ಮಗಳು, ವೃದ್ಧ ಅತ್ತೆ, ಮಾವ ಮಾತ್ರ ಮನೆಯಲ್ಲಿದ್ದರು. ಪೊಲೀ ಸರಲ್ಲಿ ಕಾರಣ ಕೇಳಿದ್ದಕ್ಕೆ ತನ್ನ ಕನ್ನೆಗೆ ಹೊಡೆ ದಿದ್ದೂ ಅಲ್ಲದೆ ತಡೆಯಲು ಬಂದ ಮಗಳು ತೌಫಿಯಾಳನ್ನು ದೂಡಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಪಾಸಣೆ ನಡೆಸಿದ ತಂಡ ಬಳಿಕ ಮಗನನ್ನು ಮತ್ತು ದುಬೈಯಲ್ಲಿರುವ ಗಂಡನನ್ನು ವಿಚಾರಿಸಿಕೊಳ್ಳುವುದಾಗಿ ಹೇಳಿ ಹೋಗಿದೆ ಎಂದು ಆಯಿಶಾ ಮನೆಯವರು ದೂರಿದ್ದಾರೆ. ನೌಶೀರ್ಗೂ-ಬಾಳಿಗಾ ಶೂಟೌಟ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಯಾರೋ ನೀಡಿರುವ ತಪ್ಪು ಮಾಹಿತಿಯ ಆಧಾರದಲ್ಲಿ ಅಮಾಯಕ ನೌಶೀರ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿರುವ ನೌಶೀರ್ ಮನೆಯವರು ಮಹಿಳೆಯರೇ ಮನೆಯಲ್ಲಿ ಇರುವಾಗ ಪೊಲೀಸರು ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಬರದೆ ದೌರ್ಜನ್ಯ ನಡೆಸಿರುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಮಾರ್ಕ್ಸ್ ಕಾರ್ಡ್, ಶಾಲಾ ಐ.ಡಿ.ಯನ್ನೂ ಕೊಂಡೊಯ್ದರು
ಆಯಿಶಾ ಮನೆಗೆ ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ ಜಾಲಾಡಿ ಸಿಕ್ಕ, ಸಿಕ್ಕ ಡೈರಿಗಳನ್ನು ಎತ್ತಿಕೊಂಡು ಹೋಗಿದ್ದೂ ಅಲ್ಲದೆ ಮಗಳು ತೌಫಿಯಾಳಿಗೆ ಸೇರಿರುವ ಶಾಲಾ ಮಾರ್ಕ್ಸ್ ಕಾರ್ಡ್, ಶಾಲೆಯ ಐ.ಡಿ., ಬಸ್ ಪಾಸ್ ಎಲ್ಲವನ್ನೂ ಕೊಂಡೊಯ್ದಿದ್ದಾರೆ. ಇದರಿಂದ ತೌಫಿಯಾಳಿಗೆ ಶಾಲೆಗೆ ಹೋಗಲು ಅನಾನುಕೂಲವಾಗಿದೆ ಎಂದು ಆಯಿಶಾ ದೂರಿದ್ದಾರೆ. ಪೊಲೀಸರು ನೌಶೀರ್ಗೆ ಸಂಬಂಧಪಟ್ಟ ದಾಖಲೆಗಳನ್ನು ಶೋಧಿಸುವ ಭರದಲ್ಲಿ ಶಾಲಾ ಬಾಲಕಿಯ ಡೈರಿ, ಬಸ್ ಪಾಸ್, ಮಾರ್ಕ್ಸ್ ಕಾರ್ಡ್ ಎತ್ತಿಕೊಂಡು ಹೋಗಿದ್ದೇಕೆ ಎನ್ನುವ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕು.
ಸೌಜನ್ಯ: ಜಯಕಿರಣ