ಭಟ್ಕಳ, ಅಕ್ಟೋಬರ್ 23: ಇತ್ತಿಚೆಗೆ ಮಾರ್ಗೋವದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಕರಾವಳಿ ತೀರಾ ಪ್ರದೇಶಗಳಿಗೆ ಭಯೋತ್ಪಾದಕರು ನುಸುಳುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲೆಯ ಕರಾವಳಿ ತೀರಗಳಲ್ಲಿ ಪೋಲಿಸರು ಕಟ್ಟೆಚ್ಚರವನ್ನು ವಹಿಸಿದ್ದು ಈ ನಿಟ್ಟಿನಲ್ಲಿ ಕಳೆದ ಎರಡು ದಿನಗಳಲ್ಲಿ ಜಿಲ್ಲಾದ್ಯಂತ ಅಣುಕು ಭಯೋತ್ಪಾದನ ಪ್ರದರ್ಶವನ್ನು ನಡೆಸಿದ್ದು ಮುರುಡೇಶ್ವರದ ತೀರದಲ್ಲಿ ನಾಲ್ಕು ಜನ ಅಣುಕು ಭಯೋತ್ಪಾದಕರನ್ನು ಬಂಧಿಸಲಾಯಿತು.

ಮುಂಬೈಯಿಂದ ಸಮುದ್ರ ಮಾರ್ಗದಿಂದ ಬಂದ ನಾಲ್ಕು ಜನ ಉಗ್ರರ ತಂಡವು ಕಾರವಾರ ಹಾಗೂ ಮತ್ತಿತರೆಡೆ ಪೋಲಿಸರ ಹದ್ದುಗಾವಲಿನ ಕಣ್ಣು ತಪ್ಪಿಸಿ ಮುರುಡೇಶ್ವರ ತೀರದ ವರೆಗೆ ಬರಬೇಕಾದರೆ ನಮ್ಮ ಪೋಲಿಸ ಇಲಾಖೆಯ ಕಾರ್ಯವೈಖರಿ ಎಂತಹದ್ದು ಎಂಬುದರ ಕುರಿತು ಊಹಿಸಿಕೊಳ್ಳುವುದು ಸಾರ್ವಜನಿಕರಿಗೆ ಬಿಟ್ಟಿದ್ದು.
ಸಮುದ್ರ ಮಾರ್ಗದಿಂದ ಎದುರಾಗಬಹುದಾದ ಭಯೋತ್ಪಾದಕ ಕೃತ್ಯವನ್ನು ಎದುರಿಸಲು ನಮ್ಮ ರಕ್ಷಣ ಇಲಾಖೆ ಎಷ್ಟರ ಮಟ್ಟಿಗೆ ಸಾಮಾರ್ಥ್ಯವನ್ನು ಹೊಂದಿದೆ ಎಂಬುದನ್ನು ಪರೀಕ್ಷಿಸುವ ನಿಟ್ಟಿನಲ್ಲಿ ನಡೆಸಲಾದ ಈ ಅಣುಕು ಪ್ರದರ್ಶನವು ಯಶಸ್ವಿಯಾಯಿತೆ? ಎನ್ನುವುದು ಈಗ ಚರ್ಚಾ ವಿಷಯವಾಗಿದೆ. ಏಕೆಂದರೆ ಮುಂಬೈಯಿಂದ ಸಮುದ್ರಮಾರ್ಗವಾಗಿ ಹೊರಟ ಮೀಸಲು ಪಡೆಯ ಮೂವತ್ತು ಉಗ್ರರಲ್ಲಿ ನಾಲ್ವರು ಮುರುಡೇಶ್ವರ ತೀರಕ್ಕೆ ಸುಲಭವಾಗಿ ನುಸುಳಿಕೊಂಡು ಬಂದಿದ್ದರು. ಪೊಲಿಸ್ ಕಮಾಂಡೋ ಪಡೆ, ನೌಕದಳ, ಕರಾವಳಿ ಕಾವಲು ಪಡೆಯು ಈ ಅಣುಕು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು ಆ ಎಲ್ಲರ ಕಣ್ಣು ತಪ್ಪಿಸಿ ಇಲ್ಲಿಯವರೆಗೆ ಬಂದಿದ್ದೆ ನಕಲಿ ಉಗ್ರರ ಸಾಧನೆ. ನಕಲಿ ಉಗ್ರರೆ ಇಲ್ಲಿಯವರೆಗೆ ಬಂದಿದ್ದಾರೆ ಅಂದರೆ ಇನ್ನು ಅಸಲಿ ಉಗ್ರರು ಬರದೆ ಇರುತ್ತಾರಾ? ಎನ್ನುವ ಪ್ರಶ್ನೆ ಸಹಜವಾಗಿಯೇ ಜನರಲ್ಲಿ ಮನೆಮಾಡಿಕೊಂಡಿದೆ.
ಕರಾವಳಿ ತೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯಲಿವೆ ಎಮಬುದರ ಕುರಿತು ಬಹಳ ಹಿಂದೆಯೆ ಗುಪ್ತಚರವರದಿಗಳು ಎಚ್ಚರವನ್ನು ನೀಡಿವೆ ಎನ್ನಲಾಗಿದ್ದು ಇದಕ್ಕೆ ಪುಷ್ಟಿ ಎನ್ನುವಂತೆ ಮೊನ್ನೆ ಗೋವಾದಲ್ಲಿ ನಡೆದ ಬಾಂಬ್ ಸ್ಪೋಟ ಹಾಗೂ ಇತ್ತಿಚೆಗೆ ಭಟ್ಕಳದಲ್ಲಿ ದೊರೆತ ಲಲಕ್ಷಾಂತರ ರೂ ಮೌಲ್ಯದ ಸ್ಪೋಟಕ ವಸ್ತುಗಳು ಇವೆಲ್ಲವು ಇಲ್ಲಿ ಉಗ್ರ ಜಾಲವು ಹರಡಿಕೊಂಡಿದೆ ಎಂಬುದಕ್ಕೆ ಸಾಕ್ಷಿಯನ್ನು ನೀಡಿವೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾರಿ ಕಟ್ಟೆಚ್ಚರವನ್ನು ವಹಿಸಲಾಗಿದ್ದು ಬಿಗಿ ಬಂದೋಬಸ್ತನ್ನು ಮಾಡಲಾಗಿದೆ ಎಂದು ಯಶಸ್ವಿಯಾಗಿ ಅಣುಕು ಪ್ರದರ್ಶನವನ್ನು ಕೈಗೊಂಡ ಜಿಲ್ಲೆಯ ಕರಾಳಿ ತೀರದ ಉಸ್ತುವಾರಿಯನ್ನು ವಹಿಸಿಕೊಂಡ ಡಿವೈಎಸ್.ಪಿ ಡಾ. ಸಿ.ಬಿ ವೇದಮೂರ್ತಿ ತಿಳಿಸಿದ್ದಾರೆ.
ತಾಲೂಕಿನ ಇತಿಹಾಸಪ್ರಸಿದ್ದ ಕ್ಷೇತ್ರ ಮುರುಡೇಶ್ವರ ಸೇರಿದಂತೆ ನಗರದ ವಿವಿಧ ದೇವಸ್ಥಾನ ಮಸೀದಿ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಹಾಗೂ ಜನನಿಭಿಡ ಪ್ರದೇಶಗಳಲ್ಲಿ ಸೂಕ್ತ ಎಚ್ಚರಿಕೆಯನ್ನು ವಹಿಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲೂ ಸಹ ವಾಹನ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. (ಫೋಟೊ: ೨೩-ಬಿಕೆಎಲ್-೦೧-೦೨-ಭಟ್ಕಳದ ರೇಲ್ವ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿರುವ ಭಟ್ಕಳ ಪೋಲಿಸರ ತಂಡ)