ಬೆಂಗಳೂರು, ಡಿ.೧೪: ಶ್ರೀರಾಮ ಸೇನೆಯ ಸೋಗಿನಲ್ಲಿರುವ ಕೆಲ ಮರಾಠಿಗರು ಹುಬ್ಬಳ್ಳಿಯ ದುರ್ಗದ ಬೈಲಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ವಿರೋಧಿಸಿದ ಕನ್ನಡ ಪರ ಹೋರಾಟಗಾರ, ಹಿರಿಯ ಪತ್ರಕರ್ತ ಹಾಗೂ ನಾಡೋಜ ಪಾಟೀಲಪುಟ್ಟಪ್ಪ ಅವರ ಮೇಲೆ ಡಿ.7ರಂದು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕ್ರಮವನ್ನು ಕನ್ನಡ ಜಾಗೃತಿ ವೇದಿಕೆಯು ತೀವ್ರವಾಗಿ ಖಂಡಿಸಿದೆ.
ಕನ್ನಡ ವಿರೋಧಿ ಚಟುವಟಿಕೆ ನಡೆಸಿ ಗಲಭೆ ಸೃಷ್ಟಿಮಾಡುವವರ ವಿರುದ್ಧ ಮಾತನಾಡಿದರೆ ಕನ್ನಡ ಪರ ಹೋರಾಟಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ನಾಡು-ನುಡಿಯ ವಿಚಾರದಲ್ಲಿ ಸಂಕಷ್ಟಗಳು ಎದುರಾದಾಗ ಕನ್ನಡ ಪರ ಹೋರಾಟಗಾರರು, ಹಿರಿಯರು, ಚಿಂತಕರು, ಪತ್ರಕರ್ತರು ಹಾಗೂ ಸಾಹಿತಿಗಳನ್ನು ವಿಧಾನಸೌಧಕ್ಕೆ ಕರೆಯಿಸಿ ಅವರ ಸಲಹೆ, ಅಭಿಪ್ರಾಯಗಳನ್ನು ಕೇಳುವ ಸರಕಾರ, ಇಂತಹವರ ಮೇಲೆ ಹಲ್ಲೆ ನಡೆದಾಗ ಖಂಡಿಸುವ ಸೌಜನ್ಯವನ್ನು ತೋರುವುದಿಲ್ಲ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಕೆ.ಮಂಜುನಾಥ(ದೇವ) ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹವರಿಂದ ಕನ್ನಡಿಗರ ಹಾಗೂ ಕರ್ನಾಟಕದ ರಕ್ಷಣೆ ಹೇಗೆ ಸಾಧ್ಯ. ರಾಜ್ಯ ಸರಕಾರ ನಿಜವಾಗಲೂ ಕನ್ನಡದ ಹಿರಿಯ ಚೇತನರಿಗೆ ಗೌರವ ಸೂಚಿಸುತ್ತಿರುವುದೆ ಆದಲ್ಲಿ, ಈ ಕೂಡಲೆ ಪಾಟೀಲ್ ಪುಟ್ಟಪ್ಪ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಿ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇಲ್ಲವಾದಲ್ಲಿ, ದುಷ್ಕರ್ಮಿಗಳ ಬಂಧನವಾಗುವವರೆಗೂ ಸರಕಾರದ ವಿರುದ್ಧ ಹಂತ ಹಂತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಮಂಜುನಾಥ ಎಚ್ಚರಿಕೆ
ನೀಡಿದ್ದಾರೆ.