ಭಟ್ಕಳ, ಡಿಸೆಂಬರ್ 23: ಶಾಲಾ ಪ್ರವಾಸದ ಬಸ್ಸು ಮತ್ತು ಖಾಸಗಿ ವಾಹನ ಬೋಲೆರೋ ಮಧ್ಯ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಎಂಟು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ೪ಗಂಟೆಗೆ ಮುರುಡೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯ ಬಂಗಾರಮಕ್ಕಿ ಕ್ರಾಸ್ ಬಳಿ ಜರುಗಿದೆ.

ಮೃತರನ್ನು ಬೋಲೆರೋ ಚಾಲಕ ರಮೇಶ ವೈತೊಂಡೆ ಸಾಂಗ್ಲಿ, ಕುಮಾರಿ ಶ್ರೀಲಕ್ಷ್ಮೀ(11) ಕುಮಾರ್ ಶ್ರೀಕುಮಾರ್(13) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯವರಾದ ಇವರು ಒಟ್ಟು ಹನ್ನೊಂದು ಜನರು ಕೇರಳದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸಾಂಗ್ಲಿಗೆ ಮರಳುತ್ತಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರದ ಶಾಲೆಯೊಂದರ ವಿದ್ಯಾರ್ಥಿಗಳು ಶಾಲಾಪ್ರವಾಸವನ್ನು ಕೈಗೊಂಡು ಕೊಲ್ಲೂರು ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಜರುಗಿದೆ. ಅಪಘಾತದಲ್ಲಿ ಬೋಲೆರೋ ವಾಹನವು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಮೇಲಿನ ಟಾಪ್ ಸಂಪೂರ್ಣವಾಗಿ ಕಿತ್ತು ಹೋಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಮುರುಡೇಶ್ವರ ಎಸ್.ಐ ಭಜಂತ್ರಿ ಗಾಯಗಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಅಲ್ಲದೆ ಸಾರ್ವಜನಿಕರು ಸಹ ವಾಹನದಲ್ಲಿ ಸಿಕ್ಕಿಹಾಕಿಕೊಂಡ ಮೃತರ ಶವವನ್ನು ತೆಗಯುವಲ್ಲಿ ಸಹಕರಿಸಿದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ