ಸಕಲೇಶಪುರ, ಡಿಸೆಂಬರ್ 11: ಶತ-ಶತ ಮಾನಗಳಿಂದ ದಲಿತರನ್ನು ಶೋಷಿಸುತ್ತಿರುವ ಮನುವಾದವನ್ನು ಜಾರಿಗೆ ತರಲು ಹವಣಿಸುತ್ತಿರುವ ಬಿ.ಜೆ.ಪಿ ಯನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸಿ ಎನ್ನುವ ಕೆಲವು ದಲಿತ ಮುಖಂಡರ ಹೇಳಿಕೆ ಯಲ್ಲಿ ಅರ್ಥವಿಲ್ಲ ಎಂದು ಪುರಸಭಾ ಸದಸ್ಯ ಹಾಗೂ ಜೆ.ಡಿ.ಎಸ್ ಯುವ ಮುಖಂಡ ಜೈ ಬೀಮ್ ಮಂಜುನಾಥ್ ಪ್ರತಿಕ್ರಿಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷಣಿಕ ಹಾಗೂ ಪಕ್ಷದ ರಾಜಕೀಯ ಲಾಭಕ್ಕಾಗಿ ವಿಧಾನ ಪರಿಷತ್ ಚುನಾವಣೆಗಾಗಿ ಟಿಕೇಟ್ ನೀಡಿದ ಏಕೈಕ ಕಾರಣಕ್ಕಾಗಿ ಹೇಗೆ ಬಿ,ಜೆ.ಪಿಗೆ ದಲಿತ ಸಮುದಾಯ ಬೆಂಬಲಿಸಲು ಸಾದ್ಯ? ಎಂದು ಪ್ರಶ್ನಿಸಿದ ಅವರು ಈ ಹೇಳಿಕೆ ನೀಡಿರುವ ದಲಿತ ಮುಖಂಡರು ತಮ್ಮ ಅಭಿಪ್ರಾಯ ಪುನರ್ ಪರಿಶೀಲಿಸ ಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಗತಿಪರ ಚಿಂತಕರು ಎಂದು ಗುರುತಿಸಿಕೊಳ್ಳುವವರ ಚಿಂತನೆಗಳೆ ಹೀಗಾದರೆ ಕೊಮುವಾದಿಗಳ ವಿರುದ್ದ ಹೋರಾಡುವುದಾದರು ಹೇಗೆ? ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ವಿಶ್ವ ಶ್ರೇಷ್ಠ ಸಂವಿಧಾನವನ್ನು ಬದಲಾಯಿಸಿ ಎನ್ನುವ? ಸಾಮಾಜಿಕ ನ್ಯಾಯವನ್ನು ಒಪ್ಪಿಕೊಳ್ಳದೆ ಮೀಸಲಾತಿಯನ್ನು ಪ್ರಶ್ನಿಸುವ? ಬಿ.ಜೆ.ಪಿ ಯನ್ನು ಬೆಂಬಲಿಸಿ ಅವರ ದಲಿತ, ಧಾರ್ಮಿಕ ಅಲ್ಪ ಸಂಖ್ಯಾತ, ಮಾನವತಾ ವಿರೋದಿ ದೋರಣೆಯನ್ನು ಗಟ್ಟಿಗೊಳಿಸ ಬೇಕೇ ಎಂದು ಪ್ರಶ್ನಿಸಿದರು.
ರಾಜ್ಯದ ವಿಧಾನ ಸಭೆಯಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ದಲಿತರ ಹೆಸರಿನಲ್ಲಿ ಯಾರನ್ನು ಗೆಲ್ಲಿಸಿ ಕೊಂಡಿತು ಎಂಬುದು ಎಲ್ಲರಿಗೂ ತಿಳಿದಿದೆ ಎನ್ನುತ್ತಾ, ಜೆ.ಡಿ.ಎಸ್ನ ಪಟೇಲ್ ಶಿವರಾಂರವರನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸುವುದು ಸೂಕ್ತ ಎಂದರು.