ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಶಿವಮೊಗ್ಗ: ನೆರೆ ಬಗ್ಗೆ ಜ್ಯೋತಿಷಿಗಳಾಗಲೀ ಹವಾಮಾನ ಇಲಾಖೆಯಾಗಲೀ ಮೊದಲೇ ತಿಳಿಸಿದ್ದಿದ್ದರೆ ಕ್ರಮ ಕೈಗೊಳ್ಳುತ್ತಿದ್ದೆವು - ರಾಮಚಂದ್ರ ಗೌಡ

ಶಿವಮೊಗ್ಗ: ನೆರೆ ಬಗ್ಗೆ ಜ್ಯೋತಿಷಿಗಳಾಗಲೀ ಹವಾಮಾನ ಇಲಾಖೆಯಾಗಲೀ ಮೊದಲೇ ತಿಳಿಸಿದ್ದಿದ್ದರೆ ಕ್ರಮ ಕೈಗೊಳ್ಳುತ್ತಿದ್ದೆವು - ರಾಮಚಂದ್ರ ಗೌಡ

Wed, 07 Oct 2009 03:14:00  Office Staff   S.O. News Service
ಶಿವಮೊಗ್ಗ, ಅ.6: ಹವಾಮಾನ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಜ್ಯೋತಿಷಿಗಳಾಗಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ರೀತಿಯಲ್ಲಿ  ಮಳೆಯಾಗಲಿದೆ ಎಂದು ತಿಳಿಸಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತಿಳಿಸಿದ್ದಾರೆ.

ನಗರದಲ್ಲಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರೀ ಪ್ರಮಾಣದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೆ, ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿತ್ತು ಎಂದರು.

ಜ್ಯೋತಿಷಿಗಳ ಮೇಲೆ ತಮಗೆ ನಂಬಿಕೆ ಇದೆ. ನಾಡಿನಲ್ಲಿ ಇಷ್ಟೊಂದು ಮಂದಿ ಜ್ಯೋತಿಷಿಗಳಿದ್ದು, ಯಾರೊಬ್ಬರು ಉತ್ತರ ಕರ್ನಾಟಕ ಹಿಂದೆಂದೂ ಕಾಣದಂತಹ ಪ್ರವಾಹವನ್ನು ಎದುರಿಸಲಿದೆ ಎಂದು ಭವಿಷ್ಯ ನುಡಿದಿಲ್ಲ. ಒಂದು ವೇಳೆ ಹಾಗೇನಾದರೂ ಜ್ಯೋತಿಷಿಗಳು ತಿಳಿಸಿದ್ದರೆ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿತ್ತು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಅತಿವೃಷ್ಠಿಯ ಪರಿಹಾರ ಕಾರ್ಯಕೈಗೊಳ್ಳಲು ಸರಕಾರ ವಿಳಂಬಧೋರಣೆ ಅನುಸರಿಸಿದೆ ಎಂದು ಹೇಳಿದ್ದಾರೆ ಎನ್ನಲಾದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಎಸ್.ಆರ್.ನಾಯಕ್ ವಿರುದ್ಧ ಹರಿಹಾಯದ ಅವರು, ಬೀದಿಯಲ್ಲಿ ಹೋಗುವವರು ಏನೋ ಹೇಳುತ್ತಾ ಹೋದರೆ ಅದಕ್ಕೆಲ್ಲ ನಾವು ಏನು ಪ್ರತಿಕ್ರಿಯೆ ನೀಡಬೇಕು ಎಂದರು.

ಸುತ್ತೂರು ಮಠದಲ್ಲಿ ರಾಜ್ಯದ ಎಲ್ಲ ಸಚಿವರಿಗೆ ಏನು ತರಬೇತಿ ನೀಡಲಾಯಿತು ಎಂಬುದು ಎಸ್.ಆರ್.ನಾಯಕ್‌ರಿಗೆ ತಿಳಿದಿಲ್ಲ ಎಂದ ಅವರು, ವಾಸ್ತವ ಸ್ಥಿತಿಯನ್ನು ತಿಳಿಯದೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕಳೆದ ಐದಾರು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಹಗಲು-ರಾತ್ರಿಗಳ ಪರಿವಿಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ನೆರೆ ಪರಿಹಾರ ಕೈಗೊಳ್ಳುವಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಎಂಬ ವಿರೋಧ ಪಕ್ಷಗಳ ವಾದದಲ್ಲಿ ಹುರುಳಿಲ್ಲ ಎಂದು ರಾಮಚಂದ್ರ ಗೌಡ ತಿಳಿಸಿದರು

Share: