ದುಬೈ: ಲಕ್ಷಾಂತರ ಮಂದಿ ಯಾತ್ರಿಕರು ಈದ್ ಉಲ್ ಅಝ್ಹಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ವಾರ್ಷಿಕ ಹಜ್ ಯಾತ್ರೆ ಕೊನೆಯ ಘಟ್ಟ ತಲುಪಿತು. ಸಾಂಪ್ರದಾಯಿಕ ಬಿಳಿ ದೋತಿ ಮತ್ತು ಶಲ್ಯ ಧರಿಸಿದ್ದ ಯಾತ್ರಿಕರು ಮಿನಾದಲ್ಲಿರುವ ಸೈತಾನನ ಸಂಕೇತಿಸುವ ಕಂಭಗಳಿಗೆ ಕಲ್ಲೆಸೆದು ಯಾತ್ರೆಯ ಮೂರನೇ ದಿನವನ್ನು ಮುಗಿಸಿದರು.
'ಮಿನಾದಲ್ಲಿ ಯಾತ್ರಿಕರು ಸೈತಾನನಿಗೆ ಕಲ್ಲೆಸುಯುವ ಕ್ರಿಯೆಯನ್ನು ಹೆಚ್ಚು ವ್ಯವಸ್ಥಿತವಾಗಿ ಯೋಜಿಸಲಾಗಿತ್ತು. ಯಾತ್ರಿಕರ ಸಹಕಾರದಿಂದಾಗಿ ಯಾವುದೇ ರೀತಿಯ ತೊಂದರೆಗಳುಂಟಾಗಲಿಲ್ಲ. ಮಕ್ಕಾದ ಬೃಹತ ಮಸೀದಿಮತ್ತು ಮದೀನಾದ ಪ್ರವಾದಿಯವರ ಮಸೀದಿಗಳಲ್ಲಿ ಈದ್ ಅಲ್ ಅಝ್ಙಾ ಪ್ರಾರ್ಥನೆಗಳು ನಡೆದವು ಎಂದು ಸೌದಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ದೇವರ ಆಜ್ಞೆಯನ್ನು ಧಿಕ್ಕರಿಸು, ಮಗ ಇಸ್ಮಾಯಿಲ್ ನನ್ನು ಬಲಿಕೊಡಬೇಡ ಎಂಬ ಸೈತಾನನ ಪ್ರಲೋಭನೆಗಳನ್ನು ಇಬ್ರಾಹಿಂ ತಿರಸ್ಕರಿಸಿದ್ದರ ಸಂಕೇತವಾಗಿ ಲಕ್ಷಾಂತರ ಹಜ್ ಯಾತ್ರಿಗಳು ಮಿನಾದಲ್ಲಿರುವ ಜಮಾರತ್ ಕಂಬಗಳಿಗೆ ಕಲ್ಲೆಸೆಯುತ್ತಾರೆ. ನಿನ್ನೆ ರಾತ್ರಿ ಮತ್ತು ಮುಂಜಾನೆ ಕಲ್ಲೆಸೆಯುವ ಕ್ರಿಯೆ ಯಾವುದೇ ನೂಕುನುಗ್ಗಲಿಲ್ಲದೆ ನಡೆಯಿತು. ಸೌದಿ ಆಡಳಿತ ಈ ಕಂಭಗಳನ್ನು ವಿಸ್ತರಿಸಿ ಐದು ಸ್ತರಗಳ ಕಾಲುಹಾದಿಯನ್ನು ನಿರ್ಮಿಸಿ ಇಲ್ಲಿ ಸಂಭವಿಸುತ್ತಿದ್ದ ಮಾರಾಣಾಂತಿಕ ಕಾಲ್ತುಳಿತ ಘಟನೆಗೆ ಪೂರ್ಣವಿರಾಮ ಹಾಕಿದೆ.
ಸೈತಾನನಿಗೆ ಕಲ್ಲೆಸೆಯುವ ಕ್ರಿಯೆ ಮುಗಿದದ್ದರ ಹಿಂದೆಯೇ ಪ್ರಾಣಿ ಬಲಿ ನೀಡಲಾಗುತ್ತದೆ. ಇಬ್ರಾಹಿಂ ಸೈತಾನನ ಪ್ರಲೋಭನೆಗಳನ್ನು ಮೀರಿ ಮಗನನ್ನು ಬಲಿಕೊಡಲು ಮುಂದಾದಾಗ ಮಧ್ಯ ಪ್ರವೇಶ ಮಾಡಿದ ದೇವದೂತ ಜಿಬ್ರೀಲ್ (ಗೇಬ್ರಿಯಲ್) ಮಗನ ಸ್ಥಾನದಲ್ಲಿ ಒಂದು ಆಡನ್ನು ಇರಿಸಿದ್ದಾಗಿ ಕುರಾನ್ ಹೇಳುತ್ತದೆ. ಇದರಂತೆ ಯಾತ್ರಾರ್ಥಿಗಳೆಲ್ಲರೂ ಒಂದು ಕುರಿಯನ್ನು ಇಲ್ಲಿ ಬಲಿಕೊಡುತ್ತಾರೆ.
ಸೌಜನ್ಯ: ಪ್ರಜಾವಾಣಿ