ಭಟ್ಕಳ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ಒಂದೇ ಕುಟುಂಬದ ಆರು ಜನರು ಸಾವಿಗೀಡಾಗಿದ್ದು ಇದು ಅತ್ಯಂತ ಅಘಾತಕಾರಿಯಾಗಿದ್ದು ಜಿಲ್ಲೆಯ ಸಮಸ್ಯೆಗಳಿಗೆ ಆದಷ್ಟು ಬೇಗನೆ ಶಾಶ್ವತ ಪರಿಹಾರ ಕಲ್ಪಿಸುಂತೆ ಉ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಾರವಾರದಿಂದ ಕುಂದಾಪುರದವರೆಗೆ ನಿರ್ಮಾಣ ಹಂತದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಭೂಕುಸಿತ ನಡೆಯುವ ಸಾಧ್ಯತೆಗಳಿವೆ. ಆದರೆ, ಇದುವರೆಗೂ ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿಲ್ಲ ಎಂಬ ದೂರುಗಳಿವೆ.ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿನ ಮನೆಗಳು ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಸಮರ್ಪಕ ಚರಂಡಿ ವ್ಯವಸ್ಥೆಗೆ ಮುಂದಾಗಿಲ್ಲ. ಈ ಹಿಂದೆ ಕುಮಟಾ ತಾಲೂಕಿನ ತಂಡರಕುಳಿ ಭಾಗದಲ್ಲಿ ಭೂಕುಸಿತವಾದಾಗಲಿ ರಾಜ್ಯ ಸರ್ಕಾರ ಎಚ್ಚರವಹಿಸಿ ಮುಂದಿನ ಅನಾಹುತಕ್ಕೆ ಪರಿಹಾರ ಕಂಡುಕೊಳ್ಳಬೇಕಿತ್ತು.
ಉತ್ತರ ಕನ್ನಡದ ಹಲವಾರು ತಾಲೂಕುಗಳಲ್ಲಿ ಅತಿವೃಷ್ಟಿ ಕಾರಣದಿಂದ ಮನೆ ಹಾನಿ, ಭೂಕುಸಿತ ಮತ್ತು ಪ್ರಾಣ ಹಾನಿಗಳಾಗಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಐ.ಆರ್.ಬಿ ಯವರ ಅವೈಜ್ಞಾನಿಕ ರಸ್ತೆ ನಿರ್ಮಾಣ ಎಲ್ಲಾ ಅವಘಡಗಳಿಗೆ ಕಾರಣವಾಗಿದೆ. ಅವರ ಮೇಲೆ ಕ್ರಿಮಿನಲ್ ಕೇಸ್ ಮಾಡಿ, ಪ್ರಾಣ ಹಾನಿ ಆದ ಕುಟುಂಬಗಳಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದೆ ಎಂದು ಈಶ್ವರ ನಾಯ್ಕ ಸಂಶಯ ವ್ಯಕ್ತಪಡಿಸಿದ್ದಾರೆ.
2019ರಲ್ಲಿಯೇ ಮುಗಿಸಬೇಕಾದ ರಾಷ್ಟ್ರೀಯ ಚತುಷ್ಪತ ಹೆದ್ದಾರಿ ಕಾಮಗಾರಿ ವಿಳಂಬವಾಗಲು ರಾಜ್ಯ ಸರ್ಕಾರದ ತಟಸ್ಥ ನೀತಿಯೇ ಕಾರಣವಾಗಿದೆ. ಚತುಷ್ಪಥ ಹೆದ್ದಾರಿ ಪ್ರಾಧಿಕಾರಕ್ಕೆ ಬೇಕಾದ ಭೂಮಿಯನ್ನ ರಾಜ್ಯ ಸರ್ಕಾರ ಸಕಾಲದಲ್ಲಿ ಖರೀದಿಸಿ ನಿರ್ಮಾಣಕ್ಕೆ ಅನುವು ಮಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ವಿಷಯದಲ್ಲಿ ಮೀನಾ ವೇಷ ಮಾಡುತ್ತಾ, ಕಾಲಹರಣ ಮಾಡುತ್ತಾ, ಹೆದ್ದಾರಿಯ ಕಾಮಗಾರಿಯನ್ನ ಸೂಕ್ತವಾದ ರೀತಿಯಲ್ಲಿ ಪರಿಶೀಲಸದೆ ಬೇಜವಾಬ್ದಾರಿಯಿಂದ ರಾಜ್ಯ ಸರ್ಕಾರ ನಡೆದುಕೊಂಡಿದೆ ಎಂದರು.
ಉತ್ತರ ಕನ್ನಡ ಭೀಕರವಾದ ಅತಿವೃಷ್ಟಿಯಿಂದ ಭಯದ ವಾತಾವರಣ ಸೃಷ್ಟಿಯಾದ ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಈ ಎಲ್ಲ ಅವಘಡಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಐ ಆರ್ ಬಿ ಯವರ ಅವೈಜ್ಞಾನಿಕ ಕಾಮಗಾರಿ ಭೂಸ್ವಾಧೀನದ ವಿಳಂಬ ನೀತಿ ಮತ್ತು ಶೀಘ್ರ ಹೆದ್ದಾರಿ ಕಾಮಗಾರಿಯ ಮುಕ್ತಾಯ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚೆಯಾಗಬೇಕು. ಈ ಸಂದರ್ಭದಲ್ಲಿ ಭೂವಿಜ್ಞಾನಿಗಳು,ಪರಿಸರ ತಜ್ಞರು, ಉತ್ತರ ಕನ್ನಡದ ಪ್ರಮುಖರು ಮತ್ತು ಅಧಿಕಾರಿಗಳ ಉಪಸ್ಥಿತರಿರಬೇಕು ಎಂದರು.
ಉತ್ತರ ಕನ್ನಡದ ಬಗ್ಗೆ ನಿರ್ಲಕ್ಷ ಧೋರಣೆಯನ್ನ ಹೀಗೆ ಮುಂದುವರಿಸಿದಲ್ಲಿ ಹಿಂದುಳಿದ ಮೋರ್ಚಾ ಪ್ರಜಾಪ್ರಭುತ್ವದ ಪ್ರತಿಭಟನೆಯ ಮಾರ್ಗವನ್ನು ಅನುಸರಿಸಿ ಎಚ್ಚರಿಸಬೇಕಾದೀತು, ಪಶ್ಚಿಮ ಘಟ್ಟದ ಈ ಸೂಕ್ಷ್ಮ ವಲಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಗಳು ಉತ್ತರ ಕನ್ನಡದಲ್ಲಿಯೇ ಸಭೆ ನಡೆಸಿ ಸೂಕ್ತ ಉತ್ತರ ನೀಡಬೇಕು ಎಂದು ಈಶ್ವರ ನಾಯ್ಕ ಆಗ್ರಹಿಸಿದ್ದಾರೆ.